ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನುಡಿನಮನ: ಸುಂದರಲಾಲ್ ಬಹುಗುಣ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಭಾರತವು ಸ್ವಾತಂತ್ರ್ಯ ಪೂರ್ವದಿಂದಲೂ ಚಳವಳಿಗಳಿಗೆ ತವರಾಗಿದೆ. ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ  ಆಡಳಿತದ ವಿರುದ್ಧ ಸಿಡಿದೆದ್ದ  ಜನತೆ ವಿಜಯ ಸಾಧಿಸಿದ ಅನೇಕ ನಿದರ್ಶನ ಗಳಿವೆ.ಅಂಥ ಚಳವಳಿಗಳಲ್ಲಿ ಚಿಪ್ಕೋ ಚಳವಳಿಯೂ ಸೇರಿದ್ದು, ಚಳವಳಿಯ ನೇತೃತ್ವ ವಹಿಸಿದ್ದ ಸುಂದರ್ ಲಾಲ್ ಬಹುಗುಣ ಹಿಮಾಲಯದ ಪರಿಸರ ಮತ್ತು ಕಾಡುಗಳ ರಕ್ಷಣೆಗಾಗಿ ತಾವು ಕೈಗೊಂಡ ಕಾರ್ಯಗಳಿಗಾಗಿ ಜನಮನ್ನಣೆ ಪಡೆದರು. ಪರಿಸರಕ್ಕೆ ಹಾನಿಯಾದ  ಸಂದರ್ಭ ಅದರ ವಿರುದ್ಧ ಜನರನ್ನು ಸಂಘಟಿಸಿ ಹೋರಾಟ ನಡೆಸಿದ ಬಹುಗುಣ ಜನ ವಿರೋಧಿ ಯೋಜನೆಗಳಿಂದ ಹಿಮಾಲಯ ತಪ್ಪಲನ್ನು ಪಾರು ಮಾಡಿದರು.

ದಟ್ಟಾರಣ್ಯದ ಹಿಮಾಲಯದ ತಪ್ಪಲಿನ ಉತ್ತರಖಂಡದ ತೇಹ್ರಿ ಸಮಿಪದ ಮರೋಡಹಳ್ಳಿಯಲ್ಲಿ  1927 ಜನವರಿ 9ರಂದು ಜನಿಸಿದ ಸುಂದರ್ ಲಾಲ್ ಬಹುಗುಣ ದೇಶದ ಆರಂಭಿಕ ಹಂತದ ಪರಿಸರವಾದಿಗಳಲ್ಲಿ ಒಬ್ಬರು. 13ರ ವಯಸ್ಸಿನಲ್ಲೆ ಶ್ರೀದೇವಿ ಸುಮನ್ ರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಆರಂಭಿಸಿದ ಬಹುಗುಣ ತನ್ನ ಜೀವನದಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಗಾಂಧಿ ಜೀವನದಿಂದ ಪ್ರೇರಿತಗೊಂಡು ಸ್ವಾತಂತ್ರ್ಯ ಪೂರ್ವದಲ್ಲೇ ವಸಾಹತುಶಾಹಿ ಆಡಳಿತದ ವಿರುದ್ಧ ಜನರನ್ನು ಜಾಗೃತಗೊಳಿಸಿದ್ದರು.

ಹಿಮಾಲಯದ ಕಾಡುಗಳಿಗೆ ಹಾನಿ ಸಂಭವಿಸುತ್ತಿದ್ದುದನ್ನು ಗಮನಿಸಿದ ಸುಂದರ್ ಲಾಲ್ ಬಹುಗುಣ  ಬೆಟ್ಟಗಳು-ಹಳ್ಳಿಗಳ ನಡುವೆ ಸುಮಾರು 4,700 ಕಿ.ಮೀಟರ್ ಗಳಷ್ಟು ದೂರ ಪಾದಯಾತ್ರೆ ಮಾಡಿ ಜನರನ್ನು ಎಚ್ಚರಿಸಿ ಹೋರಾಟ ನಡೆಸಿದರು. ಚಿಪ್ಕೋ ಚಳವಳಿಯ ನೇತೃತ್ವ ವಹಿಸಿ ಹೆಚ್ಚು ಜನಪ್ರಿಯರಾದರು. ಅರಣ್ಯಗಳು ಹಿಮಾಲಯದ ತಪ್ಪಲಿನ ಜನ-ಜೀವನದ ಪ್ರಮುಖ ಅಂಗವಾಗಿವೆ.ಚಿಪ್ಕೋ ಚಳವಳಿಗೆ ನಾಂದಿ ಹಾಡಿದ್ದು 1973ರ ಸುಮಾರಿಗೆ ಮಂಡಲ್ ಎಂಬ ಹಳ್ಳಿ . ತಮ್ಮ ಕೃಷಿ ಸಲಕರಣೆಗಳ ತಯಾರಿಗಾಗಿ ಮುರಿದು ಬಿದ್ದ ಮರಗಳನ್ನು ಜನ ಉಪಯೋಗಿಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿತ್ತು. ಸರ್ಕಾರದ ನಿರ್ಧಾರ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದೇ ಸಂದರ್ಭ ಬಂಡವಾಳಶಾಹಿಗೆ  ಮಣಿದ ಸರ್ಕಾರ ಇದೇ ಪ್ರದೇಶದಲ್ಲಿ ಕ್ರೀಡಾ ಉಪಕರಣಗಳನ್ನು ತಯಾರಿಸುವ ಕಂಪನಿಯೊಂದಕ್ಕೆ ಮರಗಳನ್ನು ಕಡಿಯಲು ಅನುಮತಿ ನೀಡಿತು.

ಕಾಡಿನ ನಾಶದ ಮುನ್ಸೂಚನೆ ಅರಿತ ಸ್ಥಳೀಯ ಮಹಿಳೆಯರು ಮರಗಳ ಸುತ್ತ ವೃತ್ತಾಕಾರದಲ್ಲಿ ನಿಂತು ಮರ ಕಡಿಯಲು ತಡೆಯೊಡ್ಡಿದರು.ಹಗಲು-ರಾತ್ರಿಯೆನ್ನದೆ ಮರಗಳನ್ನು ಅಪ್ಪಿಕೊಂಡು ನಿಂತ ಪರಿಣಾಮ ಗುತ್ತಿಗೆದಾರ ಹಿಂತಿರುಗಬೇಕಾಯಿತು. ಸುಂದರ್ ಲಾಲ್ ಬಹುಗುಣ ಚಳವಳಿಯ ನೇತೃತ್ವ ವಹಿಸಿದರು. ಮರ ಕಡಿಯುವುದರ ವಿರುದ್ಧ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಲ್ಲಿ ಮನವಿ ಮಾಡಿ ಸರ್ಕಾರದ ಕ್ರಮದ ವಿರುದ್ಧ ಸತತ ಹೋರಾಟ ನಡೆಸಿದರು. ಚಳವಳಿ ಹೊರ ಪ್ರದೇಶಗಳಿಗೂ ಹರಡಿತು. ಜನ ಜಾಗೃತರಾಗಿ ಹೋರಾಟ ತೀವ್ರ ಗೊಂಡಿತು. ಪರಿಣಾಮ ಆ ಪ್ರದೇಶದಲ್ಲಿ 15 ವರ್ಷಗಳ ಕಾಲ ಯಾವುದೇ ಮರ ಕಡಿಯದಂತೆ 1981ರಲ್ಲಿ ಕಾನೂನು ಹೊರ ಬಂದಿತು. ಸರ್ಕಾರ ಅದೇ ವರ್ಷ ಬಹುಗುಣರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಆದರೆ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಸರ್ಕಾರದ ಧೋರಣೆಯನ್ನು ಸಹಿಸದ  ಬಹುಗುಣ ಪ್ರಶಸ್ತಿ ಯನ್ನು ತಿರಸ್ಕರಿಸಿದರು.

ಚಿಪ್ಕೋ ಚಳವಳಿಯ ನಂತರ ಬಹುಗುಣ ಹಿಮಾಲಯದ ಪ್ರದೇಶಗಳಿಗೆ ಪಾದಯಾತ್ರೆ ಕೈಗೊಂಡು ಜನರಿಗೆ ಚಳವಳಿಯ ಸಂದೇಶವನ್ನು ತಲುಪಿಸಿದ ಪರಿಣಾಮ ಅವರಿಗೆ  ಬೆಂಬಲ ದೊರೆಯಿತು. ಜೊತೆಗೆ ಸ್ಥಳೀಯರಿಗೆ ಕಡಿಮೆ ದರದಲ್ಲಿ ಮೇವನ್ನು ಉತ್ಪಾದಿಸಲು ವ್ಯವಸ್ಥೆ ಮಾಡಿ, ಕಡಿಮೆ ಉತ್ಪಾದನೆ ಕೊಡುವ ಭೂಮಿಯಲ್ಲಿ ಗಿಡ ನೆಡಲು  ಸಹಾಯ ಮಾಡಿದರು. ತೇಹ್ರಿ ಅಣೆಕಟ್ಟಿನ ವಿರುದ್ಧ ತೀವ್ರ ಹೋರಾಟ ಮಾಡಿ ಅದನ್ನು ತಡೆಗಟ್ಟಿ ಭಾಗೀರಥಿ ನದಿಯನ್ನು ರಕ್ಷಿಸಿದ ಹಿರಿಮೆ ಅವರದು. ಸಸ್ಯಗಳ ಮಡಿಗಳನ್ನು ಕಾಪಾಡಲು ಮಾಡಿದ "ಬೀಚ್ ಬಚಾವೋ" ಆಂದೋಲನ ಇಂದಿಗೂ ನಡೆಯುತ್ತಿದೆ.

ಚಿಪ್ಕೋ ಚಳವಳಿಯ ಪ್ರಭಾವದಿಂದಾಗಿ ಪಶ್ಚಿಮ ಘಟ್ಟದಲ್ಲಿನ ಅರಣ್ಯ ನಾಶದ ವಿರುದ್ಧದ ಅಪ್ಪಿಕೋ ಚಳವಳಿ ಕೂಡ ಕಾವೇರಿತು. ಸುಂದರ್ ಲಾಲ್ ಬಹುಗುಣ ತಮ್ಮ ಹೋರಾಟದ ಫಲವಾಗಿ ಅಧಿಕಾರಿಶಾಹಿಗಳಿಂದ ತಮ್ಮ ಸಂಪನ್ಮೂಲಗಳನ್ನು ರಕ್ಷಿಸಲು ಹಿಮಾಲಯ ತಪ್ಪಲಿನ ಜನರಿಗೆ ಪರೋಕ್ಷವಾಗಿ ಕಾರಣರಾದರು.

ಪದ್ಮಶ್ರೀ ತಿರಸ್ಕರಿಸಿದ  ಬಹುಗುಣರಿಗೆ ಭಾರತ ಸರ್ಕಾರ 2009 ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸುತ್ತದೆ. ಚಿಪ್ಕೋ ಚಳವಳಿಗಾಗಿ "ರೈಟ್ ಲೈವ್ಲಿ ಹುಡ್ ಅವಾರ್ಡ್" ಮತ್ತು ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಲಭಿಸುತ್ತದೆ. IIT ರೂರ್ಕೆಲಾ ಡಾಕ್ಟರ್ ಆಫ್ ಸೋಶಿಯಲ್ ಸೈನ್ಸಸ್ ಗೌರವ ನೀಡುತ್ತದೆ.

ಕಾಡಿನ ವಿನಾಶದ ಪರಿಣಾಮವನ್ನು ಒಂದಿಡೀ ಸಮುದಾಯಕ್ಕೆ ಅರ್ಥೈಸಿದ ಸುಂದರ್ ಲಾಲ್ ಬಹುಗುಣ ಬಹು ದೊಡ್ಡ ಜನ-ಜಾಗೃತಿಗೆ ಕಾರಣರಾದರು. ಎಚ್ಚತ್ತುಕೊಂಡ ಜನ-ಸಮುದಾಯ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಚಿಪ್ಕೋ ಚಳವಳಿ ನಡೆದು 4 ದಶಕಗಳೇ ಉರುಳಿದವು. ಪರಿಸರದ ಮೇಲಿನ ಹಾನಿಯನ್ನು ಅಂದಿಗಿಂತಲೂ ಹೆಚ್ಚಾಗಿಯೇ ಇಂದು ಅನುಭವಿಸುತ್ತಿರುವ ಮನುಷ್ಯ ಇನ್ನೂ ಎಚ್ಚತ್ತುಕೊಳ್ಳದಿರುವುದು ದೌರ್ಭಾಗ್ಯ.ತಾನೇ ಸೃಷ್ಟಿಸಿಕೊಂಡ ವಿಷ ವರ್ತುಲದೊಳಗೆ ಸಿಲುಕಿ ಕೊಂಡು ಒದ್ದಾಡುತ್ತಿದ್ದರೂ ಇನ್ನೂ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧನಾಗದ ಮಾನವ ತಾನು ಪರಿಸರದ ಮೇಲೆ ಮಾಡಿದ ದೌರ್ಜನ್ಯ ವನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾನೆ. ಜಲ-ಅರಣ್ಯ-ಗಾಳಿಗಳೆಲ್ಲ ಮನುಷ್ಯನ ಜೀವ-ನಾಡಿಗಳು. ಮಾನವನ ಕೃತ್ಯಗಳಿಂದ ಇವು ಕಲುಷಿತಗೊಂಡ ಪರಿಣಾಮ ಜನ-ಜೀವನ ವಿನಾಶದಂಚಿನಲ್ಲಿದೆ. ಇರುವುದೊಂದೇ ಭೂಮಿ. ಇದು ಉಳಿದರಷ್ಟೇ ಜೀವನ.ಶೋಕಿಗಾಗಿಯೋ ಅಥವಾ ನೈಜ ಕಳಕಳಿಯಿಂದಲೋ ಆಚರಿಸಲ್ಪಡುವ ಪರಿಸರ ದಿನಾಚರಣೆಗಳು ನಿಜ ಉದ್ದೇಶವನ್ನು ಅರಿತರೆ ಮಾತ್ರ ಭವಿಷ್ಯ ಆಶಾದಾಯಕವಾದೀತು.

ಕೋವಿಡ್ ಗೆ ತುತ್ತಾಗಿ ನಿನ್ನೆ ಕೊನೆಯುಸಿರೆಳೆದ ಸುಂದರ ಲಾಲ್ ಬಹುಗುಣರ ಪರಿಸರ ಸಂರಕ್ಷಣಾ ಕಾರ್ಯಗಳು ಅವರು ಬೆಳೆಸಿದ ಕಾಡಿನಂತೆ ಸದಾ ಹಸಿರಾಗಿರುತ್ತವೆ.

- ತೇಜಸ್ವಿ. ಕೆ, ಪೈಲಾರು, ಸುಳ್ಯ

Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು