ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನಮನ: ಸುರೇಶ್ ಶಾ- ಕನ್ನಡ ಪುಸ್ತಕಲೋಕದ ಶಹನ್‌ಶಾ! ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಪುಸ್ತಕಗಳೊಂದಿಗೆ ಕಳೆದ ಐದು ದಶಕಗಳ ಕಾಲ ತಳಕು ಹಾಕಿಕೊಂಡ ಹೆಸರು; ಸುರೇಶ್ ಶಾ. ಪುಸ್ತಕಲೋಕದ ಮಹತ್ತ್ವಾಕಾಂಕ್ಷಿ. ಬೆಂಗಳೂರಿನ ಬೀದಿ ಬದಿಯಲ್ಲಿ ಪುಸ್ತಕ ಹರಡಿ ಮಾರುತ್ತಿದ್ದ ಸುರೇಶ್, ದುಡಿಮೆಯನ್ನೇ ಮಂತ್ರವಾಗಿಸಿಕೊಂಡು, ಬೆವರು ಬಸಿದು ಪುಸ್ತಕಗಳಿಗಾಗಿಯೇ ಭವ್ಯ ಸಪ್ನಸೌಧವೊಂದನ್ನು ಕಟ್ಟಿದವರು. ಸಾಹಿತ್ಯವೆಂದರೆ ಪರಿಷತ್ತು, ಸಿನಿಮಾ ಎಂದರೆ ಡಾ. ರಾಜಕುಮಾರ್ ಎಂಬ ಜನಪ್ರಿಯ ಸಮೀಕರಣಗಳಿದ್ದಾಗ, ಪುಸ್ತಕವೆಂದರೆ ಸಪ್ನ ಎಂಬ ಸಮೀಕರಣವೂ ಸಾಧ್ಯವಾಗುವಂತೆ ಮಾಡಿದವರು! ಇದಕ್ಕಾಗಿ  ಅವರು ತಮ್ಮ ಇಡೀ ಬದುಕನ್ನು ತೇದರು. ತಮ್ಮ ಕನಸನ್ನು ಹಂತಹಂತವಾಗಿ ನನಸಾಗಿಸಿಕೊಂಡರು. ಇದಕ್ಕಾಗಿ ಅವರು ಶ್ರಮಿಸಿದ್ದು ಸರಿಯಾಗಿ ಅರ್ಧ ಶತಮಾನ.

ಇಡೀ ಭಾರತದಲ್ಲಿ ಸಪ್ನ ಬುಕ್ ಸ್ಟಾಲನ್ನು ಸರಿಗಟ್ಟುವಂತಹ, ಕನಿಷ್ಠ ಅದರ ಹತ್ತಿರಕ್ಕೆ ಸರಿದು ನಿಲ್ಲುವಂತಹ ಇನ್ನೊಂದು ಮಳಿಗೆ ಇಲ್ಲ. ಪುಸ್ತಕಗಳ ಸಂಖ್ಯೆ, ವಿಷಯ ವೈವಿಧ್ಯ, ಬಗೆಬಗೆಯ ಗಾತ್ರ ಹೀಗೆ ಯಾವ ಸಂಗತಿಯಲ್ಲೂ ಸಪ್ನಾಗೆ ಸರಿಗಟ್ಟುವ ಪುಸ್ತಕ ಭಂಡಾರ ಇನ್ನೊಂದಿಲ್ಲ. ಕನ್ನಡ ಪುಸ್ತಕಗಳಿಗೆ ಅಸ್ಮಿತೆ ತಂದುಕೊಟ್ಟವರು ಸುರೇಶ್ ಶಾ.

ಕನ್ನಡ ಪುಸ್ತಕಗಳ ಸೀಮಿತ ಮಾರುಕಟ್ಟೆಯನ್ನು ಅಪಾರವಾಗಿ ವಿಸ್ತರಿಸಿದವರು. ಕನ್ನಡ ಪುಸ್ತಕವೊಂದರ ಸಾವಿರ ಪ್ರತಿಗಳ ಮಾರಾಟಕ್ಕೆ ಹತ್ತು ವರ್ಷ ಬೇಕಾಗುತ್ತದೆ ಎಂಬ ಸಾರಸ್ವತಲೋಕದ ರೂಢಿಗತ ನಂಬಿಕೆಯನ್ನು ತೊಡೆದುಹಾಕಿದರು. ಕನ್ನಡ ಕೃತಿಗಳ ಮಾರಾಟದ ಸಾಧ್ಯತೆಗಳನ್ನು ಪರಿಚಯಿಸಿದರು. ಕನ್ನಡ ಪುಸ್ತಕೋದ್ಯಮ ಎಂಬುದು ದುಃಸ್ವಪ್ನವಲ್ಲ, ಇಲ್ಲಿಯೂ ಸಹ ಕಮಾಯ್ ಉಂಟು ಎಂಬುದನ್ನು ಸ್ವತಃ ಸಾಕಾರಗೊಳಿಸಿ ಇತರರಿಗೆ ಮನಗಾಣಿಸಿದವರು ಅವರು! ಇಲ್ಲಿ; ಸುರಿದ ಕಾಸನ್ನು ಬಾಚಿಕೊಳ್ಳಲೂ ಸಾಧ್ಯ ಎಂದು ತೋರಿಸಿಕೊಟ್ಟಿದ್ದು ಇದೇ ಸುರೇಶ್ ಶಾ.

ಪುಸ್ತಕ ಎನ್ನುವುದು ಸಂಸ್ಕೃತಿ, ಅಷ್ಟೇ ಅಲ್ಲ; ಅದೊಂದು ಉದ್ಯಮವೂ ಹೌದು ಎಂದ ಸುರೇಶ್, ಅದನ್ನೇ ಸಾಧಿಸಿತೋರಿ ನೂರಾರು ಜನರಿಗೆ ಉದ್ಯೋಗಭಾಗ್ಯ ಕಟಾಕ್ಷಿಸಿದರು. ನಾಡಿನ 19 ಕಡೆ ಸಪ್ನ ಬುಕ್ ಹೌಸ್‌ನ ಶಾಖೆಗಳು ಬಿಳಲು ಬಿಟ್ಟುಕೊಂಡವು. ಕನ್ನಡ ಪುಸ್ತಕವೆಂದರೆ ಅರಣ್ಯರೋದನವಲ್ಲ, ಅದೊಂದು ಮಹಾಸಂಭ್ರಮವೆಂದು ಮನಗಾಣಿಸಿದವರು ಅವರೇ! ಇತರ ಪ್ರಕಾಶನ ಸಂಸ್ಥೆಗಳೂ, ತಮ್ಮ ಜಡತ್ವ ಕೊಡವಿಕೊಂಡು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳುವಂತಹ ಪ್ರೇರಣೆಯನ್ನು ಒದಗಿಸಿದರು. ಕನ್ನಡಿಗರು ಕೊಂಡು ಓದುವುದಿಲ್ಲ ಎಂಬ ಆರೋಪವನ್ನು ಅಳಿಸಿ, ಅವರ ಹೆಸರಿಗೆ ಅಂಟಿಕೊಂಡಿದ್ದ ಕಳಂಕವನ್ನು ತೊಡೆದವರಲ್ಲಿ ಅವರು ಪ್ರಮುಖರು.

ಸಪ್ನದಲ್ಲಿ ಕನ್ನಡ ಪುಸ್ತಕಗಳ ಜತೆಗೆ, ಇಂಗ್ಲಿಷ್ ಪುಸ್ತಕ, ಆಟಿಕೆ, ಭಿತ್ತಿಪಟ, ಬೋಧನೋಪಕರಣ,  ಉಡುಗೊರೆ, ಪಠ್ಯಪುಸ್ತಕ, ಧ್ವನಿಸುರುಳಿ, ಸಿಡಿ ರಾಮ್ಸ್‌ಗಳಿಗೂ ಪ್ರತ್ಯೇಕ ವಿಭಾಗಗಳು ನಿಗದಿಗೊಂಡವು. ಸುರೇಶ್ ಶಾ; ಕ್ರಮಿಸುವ ಮಾರ್ಗಕ್ಕಿಂತ ಗೆಲುವು ಮತ್ತು ಯಶಸ್ಸಿಗೆ ಪ್ರಾಮುಖ್ಯ ನೀಡಿದರು. ಆರಂಭದ ದಿನಗಳಲ್ಲಿ ಹಣವಿಲ್ಲದೆ, ಬಂಧು-ಬಳಗದಿಂದಲೇ ಉಪೇಕ್ಷೆಗೆ ಒಳಗಾದ ಕಹಿಯನ್ನು ಮರೆತಿರಲಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿದರು. ಸಪ್ನನೌಕೆ ಮುಳುಗದೆ, ದೂರತೀರ ಸೇರುವಂತೆ ಸದಾ ಕಟ್ಟೆಚ್ಚರ ವಹಿಸಿದರು. ರೂ. 250 ಮೂಲ ಬಂಡವಾಳದೊಂದಿಗೆ ಪುಸ್ತಕಲೋಕವನ್ನು ಪ್ರವೇಶಿಸಿದವರು ಅವರು. ಅವರೊಂದು ಬೆರಗು.

ಸುರೇಶ್, ಹೆಚ್ಚಾಗಿ ಓದಿಕೊಂಡವರಲ್ಲ. ಆದರೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿದರು. ಪುಸ್ತಕ ಸಾರುವ ಸಂಸ್ಕೃತಿಯನ್ನು ತಮ್ಮ ಮಕ್ಕಳ ವ್ಯಕ್ತಿತ್ತ್ವದ ಭಾಗವಾಗುವಂತೆ ಮಾಡಿದರು. ನಿತಿನ್ ಶಾ, ದೀಪಕ್ ಶಾ ಮತ್ತು ಪರೇಶ್ ಶಾ ಅವರು ಕನ್ನಡ ಪುಸ್ತಕೋದ್ಯಮದ ವಾರಸುದಾರರಾಗುವಂತೆ ಮಾಡಿದರು. ಸಪ್ನದ ದಳಪತಿಗಳನ್ನಾಗಿಸಿದರು. ದೊಡ್ಡೇಗೌಡರಂತಹ ಕಾಯಕನಿಷ್ಠರನ್ನು ಉಸ್ತುವಾರಿಗೆ ಬಿಟ್ಟರು. ಶಾ, ಪುಸ್ತಕಲೋಕದ ಜಾದೂಗಾರ. ಸಪ್ನ ಎಂಬ ಹೆಸರಿನಲ್ಲೇ ಕಮಾಲ್ ಇದೆ ನೋಡಿ ಎಂದವರು. ಸಪ್ನದ ಈ ಧಣಿಯಲ್ಲಿ ಕಡೆಯತನಕ ಕಾರ್ಮಿಕನೊಬ್ಬ ಜಾಗೃತನಾಗಿದ್ದ. ಕೋಟಿಗಳಿಗೆ ಹೆಡೆಯೆತ್ತಿದರೂ, ಪ್ರತಿದಿನ ಬೆಳಗ್ಗೆ ಕೆಲಸಗಾರರು ಬರುವ ಮುನ್ನ ತಾವೇ ಸ್ವತಃ ಕಸ ಗುಡಿಸಿ, ನೆಲ ಸಾರಿಸಿ ಧೂಳು ಒರೆಸಿ ಪುಸ್ತಕಗಳ ಮೈದಡವಿ ತಣಿಯುತ್ತಿದ್ದ ಅಪರೂಪದ ಧಣಿ ಅವರು. ತಮ್ಮ ನಿತ್ಯದ ಈ ಕ್ರಮವನ್ನು ಸ್ವಂತೀ ತೆಗೆದುಕೊಂಡು ಪ್ರಚಾರದ ಸರಕನ್ನಾಗಿಸಿಕೊಳ್ಳಲಿಲ್ಲ.

ಸಪ್ನ ಬುಕ್ ಸ್ಟಾಲ್; ಸದ್ದಿಲ್ಲದೆ ಸ್ವಚ್ಛತಾ ಅಭಿಯಾನ ಕೈಗೊಂಡಿತು. ಇದು ಒಂದಲ್ಲ, ಎರಡಲ್ಲ, ಐವತ್ತು ವರ್ಷಗಳನ್ನು ಮೀರಿದ ಸುದೀರ್ಘ ಯಾನ. ಅವರು ಕನ್ನಡ ಪುಸ್ತಕಗಳಿಗೆ ಲಕಲಕಿಸುವ ಭಾಗ್ಯವನ್ನು ಪ್ರಸಾದಿಸಿದವರು. 

ಕನ್ನಡ ಪುಸ್ತಕಗಳೆಲ್ಲ ಒಂದೇ ಸೂರಿನಡಿಯಲ್ಲಿ ಮಾರಾಟಕ್ಕೆ ಲಭ್ಯವಾಗಬೇಕೆಂಬ ಕನ್ನಡಿಗರ ಶತಮಾನದ ನಿರೀಕ್ಷೆ ಕಾರ್ಯಗತವಾಗುವಂತೆ ಮಾಡಿದ ಕಾರ್ಯಕ್ಷಮತೆ ಅವರದು. ಕಲ್ಬುರ್ಗಿ, ಚಿದಾನಂದಮೂರ್ತಿ, ವೆಂಕಟಾಚಲ ಶಾಸ್ತ್ರೀ, ನಿಸಾರ್ ಅಹಮದ್, ಸುಮತೀಂದ್ರ ನಾಡಿಗ್ ಅವರಂತಹವರ ಸಮಗ್ರ ಸಾಹಿತ್ಯವನ್ನು ಹೊರತರುವ ಧೈರ್ಯ ತೋರಿದ್ದೇ ಸಪ್ನ‌‌. ನಮ್ಮ ಹಲವು ವಿಶ್ವವಿದ್ಯಾಲಯಗಳ ಕನ್ನಡ ಪ್ರಸಾರಾಂಗಗಳ ಒಟ್ಟು ಪ್ರಕಟಣೆಗಳ ಸಂಖ್ಯೆಯನ್ನು ಸಪ್ನ ಮೀರಿಸುತ್ತದೆ! 

ಸಪ್ನದ ಕನ್ನಡ ವಿಭಾಗದ ಮೊದಲ ವಾರ್ಷಿಕೋತ್ಸವ 30-10-1989ರಂದು. ಇದರ ಉದ್ಘಾಟನೆಗೆ ಡಾ. ಶಿವರಾಮ ಕಾರಂತರನ್ನು ಕರೆಸಲು ನಾನು ಸೂಚಿಸಿದೆ. ನಾನೇ ಪತ್ರ ಬೆರಳಚ್ಚಿಸಿಕೊಟ್ಟೆ. ಅವರನ್ನು ಸಮಾರಂಭಕ್ಕೆ ಬರುವಂತೆ ಮಾಡಿದೆ. ಕಾರಂತರು ಬಂದರು. ಎರಡು ಗಂಟೆಗಳ ಕಾಲ ಮಳಿಗೆಯಲ್ಲಿದ್ದರು. ಅದರ ಅಂದ, ಚೆಂದ ಕಂಡು ಮರುಳಾದರು‌. ವಿಶ್ವದ ಅನೇಕ ಪುಸ್ತಕ ಮಳಿಗೆಗಳನ್ನು ತಾವು ನೋಡಿರುವುದಾಗಿಯೂ, ಆದರೆ ಇಷ್ಟು ಆಕರ್ಷಕವಾಗಿ ಎಲ್ಲಿಯೂ ಪ್ರದರ್ಶಿಸಿಲ್ಲವೆಂದು ನನ್ನ ಬಳಿ ಹೇಳಿದರು. ಅದನ್ನೇ ಬಹಿರಂಗವಾಗಿ ತಮ್ಮ ಭಾಷಣದಲ್ಲೂ ಉಸುರಿದರು. ಕಾರಂತರು ಅಲ್ಲಿನ ಪರಿಶುಭ್ರತೆಗೆ ಮಾರುಹೋಗಿದ್ದರು. ಹೋದ ಕಡೆಗಳಲ್ಲಿ ಸಾಮಾನ್ಯವಾಗಿ ಮಾತಿನಲ್ಲೇ ಕಟಕಿಯಾಡಿ, ಕುಟುಕು ಕಾರ್ಯಾಚರಣೆ ನಡೆಸುತ್ತಿದ್ದ ಶಿವರಾಮ ಕಾರಂತರು, ಸುರೇಶ್ ಶಾ ಅವರ ಕಾರ್ಯಕ್ಷಮತೆಯನ್ನು ಕೊಂಡಾಡಿದ ಘಟನೆಗೆ ಅಂದು ಮಾಧ್ಯಮಗಳು ಸಾಕ್ಷಿಯಾದವು.

ಮುಂದೊಂದು ದಿನ ಸಪ್ನದ ಆಗಿನ ವ್ಯವಸ್ಥಾಪಕ ಎಚ್. ಲಕ್ಷ್ಮೀನಾರಾಯಣ ಅಡಿಗರೊಂದಿಗೆ ನಾನು ಸಾಲಿಗ್ರಾಮದ ಕಾರಂತರ ನಿವಾಸಕ್ಕೆ ಹೋದಾಗ, ತಮ್ಮ 400ಕ್ಕೂ ಹೆಚ್ಚಿನ ಪುಸ್ತಕಗಳ ಪ್ರತಿಗಳನ್ನು ಕೊಟ್ಟು ಸಪ್ನ ಸಂಸ್ಥೆ ಯಾವುದನ್ನಾದರೂ ಪ್ರಕಟಿಸಿಕೊಳ್ಳಬಹುದು ಎಂದರು. ಕರಾರುಪತ್ರವನ್ನು ಮುಂದಿನ ದಿನಗಳಲ್ಲಿ ಮಾಡಿಕೊಳ್ಳೋಣವೆಂದು ಬೀಳ್ಕೊಟ್ಟರು. ಅಲ್ಲಿಂದ ಸಪ್ನ ನೆಗೆಯಿತು; ಜಿಗಿಯಿತು, ಚೆಂಗುಚೆಂಗೆಂದು ಹಾರಿತು. ಸುರೇಶ್ ಶಾ ಈ ಅವಕಾಶವನ್ನು ಬಳಸಿಕೊಂಡರು. ಪ್ರಸಿದ್ಧ ಸಾಹಿತಿಗಳು ತಮ್ಮ ಕೃತಿಗಳು ಸಪ್ನದಿಂದ ಪ್ರಕಟವಾಗಲು ಹಾತೊರೆದು ಸಾಲುಗಟ್ಟಿದರು.

ಗುಜರಾತ್ ಮೂಲದ ಸುರೇಶರ ಸಾಧನೆಯಿದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅವರು ಪಡೆದೂ ಹೋದವರು; ಕೊಟ್ಟೂ ಹೋದವರು. ಕೊಟ್ಟಿದ್ದು ಮೂರ್ತರೂಪದಲ್ಲಿ ಕಣ್ಣಮುಂದಿದೆ. ಅವರ ಅಗಲಿಕೆಯಿಂದಾಗಿ ಕನ್ನಡ ಹೊತ್ತಗೆಗಳ ಕಣ್ಣು ಕರಗಿ ಅಕ್ಷರಗಳೇ ಮಸುಕಾಗಿವೆ! ಅವು ಸುರೇಶ್ ಶಾ ಅವರಿಗೆ ಗೌರವಪೂರ್ವಕ ವಿದಾಯ ಕೋರುತ್ತಿವೆ. ಕನ್ನಡ ಇರುವವರೆಗೆ ಅವರು ನಮ್ಮ ನೆನಪಿನಲ್ಲಿ ಭದ್ರ. ಏಕೆಂದರೆ ಅವರು ಕನ್ನಡವನ್ನು ಏರಿಸಿ, ಹಾರಿಸಿ, ಬಗೆಬಗೆಯಲ್ಲಿ ಬಿತ್ತರಿಸಿದವರು. ಅವರು ನಮ್ಮ ಕನ್ನಡ ಪುಸ್ತಕೋದ್ಯಮದ  ಶಹನ್‌ಶಾ! ಹೌದು ಚಕ್ರವರ್ತಿ.

- ಕೆ. ರಾಜಕುಮಾರ್

Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು