ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕೊರೊನಾ ಮುಕ್ತಿಗೆ ಚತುಃ ಸಂಹಿತಾಯಾಗ ಸಂಕಲ್ಪಿಸಿದ ಶತಾಯುಷಿ ವಿದ್ವಾಂಸ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಪಕ್ಷಿಕೆರೆಯಲ್ಲಿ ಸಾಮ ಸಂಹಿತಾಯಾಗ ಆರಂಭ 



ಉಡುಪಿ: ಕಂಡು ಕೇಳರಿಯದ ವಿಪತ್ತು ನಷ್ಟವನ್ನು ತಂದಿಟ್ಟು ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಮಹಾವ್ಯಾಧಿಯ ಮುಕ್ತಿಗಾಗಿ ಪ್ರಪಂಚಾದ್ಯಂತ ಅಸಂಖ್ಯ ಜನ ಅವರವರ ತಿಳುವಳಿಕೆ ಸಾಮರ್ಥ್ಯಕ್ಕನುಗುಣವಾಗಿ ಹಗಲಿರುಳೆನ್ನದೆ ಭಗೀರಥ ಯತ್ನ ನಡೆಸುತ್ತಿದ್ದಾರೆ.‌

ಸರಕಾರಗಳು, ವೈದ್ಯರು, ವಿಜ್ಞಾನಿಗಳು, ಸಹಸ್ರಾರು ಸೇವಾ ಸಂಸ್ಥೆಗಳು ಈ ಮಹಾ ಸಾಹಸದ ಯಶಸ್ಸಿಗಾಗಿ ಸರಿಯಾಗಿ ನಿದ್ರೆಮಾಡದೇ ತಿಂಗಳುಗಳೇ ಕಳೆದಿರಬಹುದು. 

ಇಲ್ಲೊಬ್ಬ ಪರಮಸಾತ್ವಿಕ ಶತಾಯುಷಿ ವೈದಿಕರು ಕೊರೊನಾ ಮುಕ್ತಿ ಮತ್ತು ಜಗತ್ತಿನ ಕ್ಷೇಮಕ್ಕಾಗಿ ಅತ್ಯಂತ, ಶ್ರದ್ಧೆ ಪರಿಶ್ರಮಗಳಿಂದ ಕೂಡಿದ ಚತುಃ ಸಂಹಿತಾಯಾಗವನ್ನು ಸಂಕಲ್ಪಿಸಿ ಅಚ್ಚರಿ ಮೂಡಿಸಿದ್ದಾರೆ.

ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ತಮ್ಕ ನಿವಾಸದಲ್ಲಿ ಈ ಯಾಗವನ್ನು ಸದ್ದಿಲ್ಲದೇ ಕಳೆದ ಅನೇಕ ದಿನಗಳಿಂದ ನಡೆಸುತ್ತಿರುವವರು ಸ್ವತಃ ಚತುರ್ವೇದ ಪಾರಂಗತರೂ ಆಗಿರುವ ನೂರ ಎರಡರ (102) ಹರೆಯದ ವೈದಿಕ ಅಂಗಡಿಮಾರು ಕೃಷ್ಣ ಭಟ್ಟರು.

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ತಂದೆಯವರಾಗಿರುವ ಭಟ್ಟರು ತಮ್ಮ ಅಪಾರವಾದ ಜೀವನಶ್ರದ್ಧೆಯಿಂದ ಮಾದರಿ ಬದುಕು ನಡೆಸುತ್ತಿರುವವರು. ಸ್ವಂತಕ್ಕಾಗಿ ಅಲ್ಪ ಪರಾರ್ಥಕ್ಕಾಗಿ ಅಪಾರ ಎಂಬ ನೈಜ ನೆಲೆಯಲ್ಲಿ ವೈದಿಕ ಜೀವನವನ್ನು ನಡೆಸಿಕೊಂಡು ಬರುತ್ತಿರುವವರು.

ತಾನು ಮಾತ್ರವಲ್ಲದೇ ತಮ್ಮ ತುಂಬು ಸಂಸಾರಕ್ಕೂ ಇದೇ ಸಾತ್ವಿಕ ತತ್ವದ ಜೀವನ ಪಾಠವನ್ನು ಬೋಧಿಸಿ ಅವರೂ ಅದೇ ದಾರಿಯಲ್ಲಿ ನಡೆಯಲು ಪ್ರೇರೇಪಿಸಿದವರು.

ತಮ್ಮ ಜೀವಮಾನದಲ್ಲಿ ಕೊರೊನಾದಂಥಹ ಮಹಾವ್ಯಾಧಿ ಜಗತ್ತನ್ನು ಕಂಡು ಕೇಳರಿಯದ ರೀತಿಯಲ್ಲಿ ಬಾಧಿಸುತ್ತಿರುವುದನ್ನು ಕಂಡು ಮರುಗಿದ ಈ ಹಿರಿಜೀವ ತನ್ನ ಅರಿವಿನ ನೆಲೆಯಲ್ಲಿ ಋಕ್ ಯಜು ಸಾಮ ಹಾಗೂ ಅಥರ್ವವೇದಗಳೆಂಬ ನಾಲ್ಕೂ ವೇದಗಳ ಯಾಗವನ್ನು ಸಂಕಲ್ಪಿಸಿ ತಾನೇ ಸ್ವತಃ ಯಾಜ್ಞಿಕರಾಗಿ ಯಾಗ ನೆರೆವೇರಿಸುತ್ತಾ ಲೋಕಕ್ಷೇಮಕ್ಕಾಗಿ ವೇದಪುರುಷನಲ್ಲಿ (ಭಗವಂತನಲ್ಲಿ) ಪ್ರಾರ್ಥಿಸುತ್ತಿದ್ದಾರೆ.



ಕಳೆದ ಅನೇಕ ದಿನಗಳಿಂದ ತನ್ನ ಸ್ವಗೃಹದಲ್ಲೇ ವಿದ್ವಾಂಸರೂ ಆಗಿರುವ ಪುತ್ರರು ಹಾಗೂ ಇತರೆ ಕೆಲವು ವಿದ್ವಾಂಸರ ಸಹಕಾರದೊಂದಿಗೆ ಈ ಚತುಃ ಸಂಹಿತಾಯಾಗ ಪ್ರಾರಂಭಿಸಿದ ಭಟ್ಟರು ಈಗಾಗಲೇ ಋಕ್ ಮತ್ತು ಯಜುಃಸಂಹಿತಾ ಯಾಗಗಳನ್ನು ಸಂಪನ್ನಗೊಳಿಸಿದ್ದಾರೆ.

ಇದೀಗ ವೈಶಾಖ ಬಹುಳ ಪಂಚಮಿಯಂದು ಭಾನುವಾರದಂದು ಸಾಮಸಂಹಿತಾ ಯಾಗವನ್ನು ಪ್ರಾರಂಭಿಸಲಾಗಿದ್ದು ಐದು ದಿನಗಳ ಕಾಲ ನಡೆಯಲಿದೆ.

1198 ಅಪೂರ್ವ ಮಂತ್ರಗಳನ್ನು ಒಳಗೊಂಡಿರುವ ಸಾಮವೇದವನ್ನು ಗಾನರೂಪದಲ್ಲಿ ಪಠಿಸುವುದರಿಂದ ದಿನಕ್ಕೆ ಸುಮಾರು ಇನ್ನೂರರಷ್ಟು ಮಂತ್ರಗಳ ಆಹುತಿಯನ್ನು ಯಜ್ಞಮುಖೇನ‌ ಅರ್ಪಿಸಲಾಗುತ್ತಿದೆ. 

ಲಾಕ್ ಡೌನ್ ಇರುವ ಕಾರಣ ಯಾವ ಆಡಂಬರವೂ ಇಲ್ಲದೇ ಕೊರೊನಾ ನಿರ್ಬಂಧಗಳನ್ನು ಪಾಲಿಸಿಕೊಂಡು ಕೇವಲ ಬೆರಳೆಣಿಕೆಯ ವಿದ್ವಾಂಸರನ್ನು ಮಾತ್ರ ಸೇರಿಸಿಕೊಂಡು  ಅನುಷ್ಠಾನಕ್ಕೆ ಹೆಚ್ಚು ಒತ್ತುಕೊಡು ಈ ಕರ್ತವ್ಯವನ್ನು ನೆರವೇರಿಸಲಾಗುತ್ತಿದೆ.

ಈ ಯಾಗ ಮುಗಿದ ಬಳಿಕ ಅಥರ್ವಸಂಹಿತಾಯಾಗವನ್ನೂ ನಡೆಸಿ ಭಗವದರ್ಪಣಗೊಳಿಸಿ ಲೋಕಕ್ಷೇಮ ಕರುಣಿಸುವಂತೆ ಪ್ರಾರ್ಥಿಸಲಾಗುವುದು ಎಂದು ಭಟ್ಟರ ಸುಪುತ್ರ ವಿದ್ವಾನ್ ವಿಶ್ವೇಶ ಭಟ್ ತಿಳಿಸಿದ್ದಾರೆ.

ಸಂಪರ್ಕ ಸಂಖ್ಯೆ: ವಿದ್ವಾನ್ ವಿಶ್ವೇಶ ಭಟ್ ಪಕ್ಷಿಕೆರೆ 94486 27578

(ಮಧ್ಯಾಹ್ನ 4 ರಿಂದ 5.30 ರ ವರೆಗೆ ಮಾತ್ರ ಕರೆ ಮಾಡಬಹುದು)

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು