ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪಾದಯಾತ್ರೆಯ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸುತ್ತಿರುವ ವಿವೇಕಾನಂದ ಹೆಚ್‌.ಕೆ ಎಂಬ ಮಾನವತಾವಾದಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ರಾಜ್ಯದಲ್ಲಿ ಜಾಲತಾಣದ ಬರೆಹಗಳ ಪರಿಚಯವಿರುವ ಯಾರಿಗೂ ಕೂಡ ಇವರ ಪರಿಚಯವಿಲ್ಲದೆ ಇರಲಿಕ್ಕೆ ಸಾಧ್ಯವಿಲ್ಲ. ನನಗೂ ಕೂಡ ಅವರ ಪರಿಚಯ ಮಾಡಿಸಿದ್ದು ಬಹುಮುಖಿ ದೃಷ್ಟಿಕೋನ, ವಿಶಾಲ ವ್ಯಾಪ್ತಿ ಮತ್ತು ಲೋಕ ಹಿತದ ಪರ ಪರಿಣಾಮಕಾರಿಯಾಗಿರುವ ಅವರ ಬರೆಹಗಳೇ.. ಸದೃಢವಾದ ಸೈದ್ಧಾಂತಿಕತೆ ಮತ್ತು ಸದಾಶಯಗಳಿಂದ ಕೂಡಿದ ಅನುದಿನದ ಸರಣಿ ಬರೆಹಗಳ ಮೂಲಕ ನಾಡಿನಾದ್ಯಂತ ಸರ್ವ ಸಮಾಜದ ಪ್ರೀತಿಗೆ ಪಾತ್ರರಾಗಿರುವ ವಿವೇಕಾನಂದರು ಕಳೆದ ಸರಿಸುಮಾರು 7 ತಿಂಗಳ ಹಿಂದೆ ದಿನದಿಂದ ದಿನಕ್ಕೆ ಜನಮಾನಸದಲ್ಲಿ ನಶಿಸುತ್ತಿರುವ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ರಾಜ್ಯಾದ್ಯಂತ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ.

ಇತಿಹಾಸದಲ್ಲಿ ರಾಜಕೀಯ-ಧಾರ್ಮಿಕ ಪಾದಯಾತ್ರೆಗಳನ್ನು ನಾವು ಬಹಳ ಕಂಡಿದ್ದೇವೆ. ಇಂತಹ ಪಾದಯಾತ್ರೆಗಳು ಆಧ್ಯಾತ್ಮಿಕ ಪ್ರತಿಫಲ ಮತ್ತು ಲೌಕಿಕ ಸ್ಥಾನಮಾನಗಳ ಪ್ರತ್ಯಕ್ಷ- ಪರೋಕ್ಷ ಬಯಕೆಗಳಿಂದ ಕೂಡಿ, ಆಳದ ಅವಲೋಕನಕ್ಕೊಳಪಟ್ಟಾಗ ಸ್ವಲ್ಪ ಸ್ವಾರ್ಥಪರವಾಗಿಯೇ ಕಾಣಿಸುತ್ತವೆ. ಆದರೆ ವಿವೇಕಾನಂದರು ಯಾವ ರಾಜಕೀಯ ವ್ಯಕ್ತಿಯೂ ಅಲ್ಲ, ಧಾರ್ಮಿಕ ನೇತಾರರೂ ಅಲ್ಲ. ಸಮಾಜ ಬದಲಾಗಿ ಮಾನವೀಯ ಮೌಲ್ಯಗಳ ಪ್ರಬಲ ಪ್ರತಿಷ್ಠಾಪನೆಯಾಗಬೇಕೆಂಬುದು ಇವರ ನಿಷ್ಕಲ್ಮಶ, ಪ್ರಾಮಾಣಿಕ ಮತ್ತು ಸ್ಪಷ್ಟ ಉದ್ದೇಶ. ಭವಿಷ್ಯದ ಪೀಳಿಗೆಗೆ ಭೂಮಿಯ ಮೇಲೆ ಮಾನವೀಯತೆಯನ್ನು ಜೀವಂತವಿರಿಸಿ ಅವರಾದರೂ ಶಾಂತಿ ನೆಮ್ಮದಿಯಲ್ಲಿ ಬದುಕಲಿ ಎಂಬ ಸುಮನಸ್ಸಿನ ಬಯಕೆ ನಮ್ಮ ವಿವೇಕಾನಂದರದ್ದು.

ಶ್ರೀಯುತರು ಕಳೆದ 220 ದಿನಗಳಿಂದ ಬಿಸಿಲು ಮಳೆ ಗಾಳಿಗಳನ್ನು ಲೆಕ್ಕಿಸದೆ ಇಡೀ ರಾಜ್ಯಾದ್ಯಂತ ಪಾದಯಾತ್ರೆ ಮಾಡುತ್ತಿದ್ದಾರೆ. ಇಂತಹ ಉನ್ನತ ಆಶಯವನ್ನಿಟ್ಟುಕೊಂಡು, ಈ ಮಟ್ಟದ ದೇಹದಂಡನೆ ಮಾಡಿಕೊಂಡು, ಸಾವಿರಾರು ಕಿಲೋಮೀಟರ್ ದುರ್ಗಮ ಪರಿಚಿತವಲ್ಲದ ಹಾದಿಯನ್ನು ಕ್ರಮಿಸಿ, ಮಾನವೀಯತೆಗಾಗಿ ಮಿಡಿದ ಮತ್ತೊಂದು ಮನಸ್ಸು ನನ್ನ ಜೀವಮಾನದಲ್ಲಿ ನಾನು ನೋಡಿಲ್ಲ. ನಾಡಿನ ಪ್ರಜ್ಞಾವಂತರೆಲ್ಲರೂ, ಈ ಸುಮನಸ್ಸಿನ ಸಂತ ಸ್ವರೂಪಿಯ ಪಾದಯಾತ್ರೆ ಯಶಸ್ವಿಯಾಗಿ, ಅದು ನಾಡಿನ ಇತಿಹಾಸ ಪುಟದ ಅತಿದೊಡ್ಡ ಅಧ್ಯಾಯವಾಗುವಲ್ಲಿ ಸಹಕರಿಸಬೇಕೆಂಬ ಕಳಕಳಿಯ ಮನವಿ ನನ್ನದು. ಬದುಕಿನಲ್ಲಿ ಮತ್ತೊಮ್ಮೆ ಕಾಣಲಾಗದ, ಈ ಅಕ್ಷರ-ಅರಿವುಗಳಿಗೆ ನಿಲುಕದ ವಿವೇಕಾನಂದರ ಕಾಯಕವನ್ನು ಕಂಡು ಕಾಣದಂತಿರುವುದು ನಿಜಕ್ಕೂ ಮಾನವೀಯತೆಯು ಮನಸ್ಸಿನಲ್ಲಿ ಜೀವಂತವಿಲ್ಲದ್ದರ ಸಂಕೇತವಲ್ಲವೇ?...

ನಾಡಿನ ಎಲ್ಲ ತಾಲ್ಲೂಕುಗಳಿಗೆ ತಲುಪಲಿರುವ ಮಿತ್ರರಾದ ಮಾನ್ಯ ವಿವೇಕಾನಂದರ ಪಾದಯಾತ್ರೆಗೆ ಭವ್ಯ ಸ್ವಾಗತ ದೊರಕಲಿ ಎಂಬ ಮನದಾಳದ ಹಾರೈಕೆ ನನ್ನದು..

-ಮುಷ್ತಾಕ್ ಹೆನ್ನಾಬೈಲ್


(ಉಪಯುಕ್ತ ನ್ಯೂಸ್)

Post a Comment

أحدث أقدم